ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಈ ಬೆಟ್ಟವು ಸುಮಾರು ೮೨೬ ಮೀ. ನಷ್ಟು ಎತ್ತರವಿದೆ. ಈ ಬೆಟ್ಟವು ಪಾರ್ಶ್ವನಾಥ ತೀರ್ಥಂಕರರಿಗೆ ಸಮರ್ಪಿತವಾದ ೧೭ ನೇ ಶತಮಾನದ ಜೈನ ದೇವಾಲಯಕ್ಕೆ ಹೆಸರುವಾಸಿಯಾಗಿದೆ ಮತ್ತು ಈ ಸ್ಥಳವು ಹಿಂದಿನ ಶತಮಾನಗಳಲ್ಲಿ ಆಚಾರ್ಯ ಕುಂದಕುಂದನಿಗೆ ಆಶ್ರಯ ನೀಡಿತ್ತು ಎಂದು ತಿಳಿದುಬಂದಿದೆ. ಈ ದೇವಾಲಯದ ಒಂದು ಬದಿಯಲ್ಲಿ ಬಂಡೆಯಿಂದ ರೂಪುಗೊಂಡ ಎರಡು ಸಣ್ಣ ಕೊಳಗಳು ಹಿಂದಿನ ಋಷಿಗಳಿಗೆ ನೀರನ್ನು ಒದಗಿಸುತ್ತಿದ್ದವು. ಕುಂದಾದ್ರಿ ಬೆಟ್ಟವು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ ಹಾಗು ನೂರಾರು ಚಾರಣಿಗರು ಚಾರಣ ಮಾಡಲು ಬರುತ್ತಾರೆ. ಬೆಟ್ಟದ ತುದಿಗೆ ಎಲ್ಲಾ ಹವಾಮಾನದ ರಸ್ತೆಯನ್ನು ನಿರ್ಮಿಸಲು ಕರ್ನಾಟಕ ಸರ್ಕಾರವು ಮುಂಬೈನ ಲೋಕೋಪಕಾರಿಯೊಂದಿಗೆ ಕೈಜೋಡಿಸಿತು. == ಇತಿಹಾಸ == ಎರಡು ಸಾವಿರ ವರ್ಷಗಳ ಹಿಂದೆ, ಕುಂದಕುಂದ ಆಚಾರ್ಯ ಎಂಬ ಶ್ರೇಷ್ಠ ದಿಗಂಬರ ಜೈನ ಮುನಿ ಇಲ್ಲಿ ನೆಲೆಸಿದ್ದರು. ಇದರಿಂದಾಗಿ ಈ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಬಂತು. ಭಾಷಾ ಶಾಸ್ತ್ರದ ನಿಟ್ಟಿನಲ್ಲಿ ನೋಡಿದರೆ, ಕನ್ನಡದಲ್ಲಿ ಕುಂದ ಎಂಬ ಪದಕ್ಕೆ ಎತ್ತರವಾದ ಗೋಡೆ ಎಂಬ ಅರ್ಥವೂ ಇರುವುದರಿಂದ, ಕುಂದದ ರೀತಿ ಇರುವ ಬೆಟ್ಟ ಕುಂದಾದ್ರಿ ಎಂಬ ಹೆಸರು ಜನಬಳಕೆಯಲ್ಲಿ ಬಂದಿರಲೂಬಹುದು. ಇಲ್ಲಿ ಜೈನ ಸಾಧುಗಳ ಕಲ್ಲಿನ ಪ್ರತಿಮೆಗಳೊಂದಿಗೆ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಸ್ಥಳವು ಏಕಾಂತವಾಗಿರುವುದರಿಂದ, ಗುಪ್ತ ನಿಧಿಯನ್ನು ಕಂಡುಹಿಡಿಯಲು ಕಲ್ಲಿನ ಪ್ರತಿಮೆಗಳನ್ನು ಹಾನಿಗೊಳಿಸುವ ಪ್ರಯತ್ನಗಳು ನಡೆದಿವೆ. == ಸಾರಿಗೆ == ಕುಂದಾದ್ರಿಯು ಜಿಲ್ಲಾ ಕೇಂದ್ರವಾದ ಶಿವಮೊಗ್ಗದಿಂದ ಸುಮಾರು ೮೦ ಕಿ.ಮೀ ಮತ್ತು ತೀರ್ಥಹಳ್ಳಿ ಪಟ್ಟಣದಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿಯನ್ನು ತಲುಪಲು ರಾಷ್ಟ್ರೀಯ ಹೆದ್ದಾರಿ ಎನ್ಎಚ್ -೧೩ (ತೀರ್ಥಹಳ್ಳಿ ರಸ್ತೆ) ಮೂಲಕ ಹೋಗಬೇಕು. ನಂತರ ರಾಜ್ಯ ಹೆದ್ದಾರಿ ಎಸ್ಎಚ್-೧ (ಆಗುಂಬೆ ರಸ್ತೆ) ನಲ್ಲಿ ಗುಡ್ಡೆಕೇರಿಯವರೆಗೆ ಸಾಗಿ ನಂತರ ಎಡಕ್ಕೆ ತಿರುಗಬೇಕು. ಬೆ೦ಗಳೂರಿನಿ೦ದ ತೀರ್ಥಹಳ್ಳಿಗೆ ಇರುವ ಒಟ್ಟು ದೂರವು ೩೩೨ ಕಿ.ಮೀ ಅಗಿದೆ. ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ೧೩ ರ ಮೂಲಕ ತೀರ್ಥಹಳ್ಳಿಯನ್ನು ತಲುಪಬಹುದು. ಮಂಗಳೂರು ತೀರ್ಥಹಳ್ಳಿಯಿಂದ ಸುಮಾರು ೧೪೬ ಕಿ.ಮೀ ದೂರದಲ್ಲಿದೆ. ಉಡುಪಿಯಿಂದ ತೀರ್ಥಹಳ್ಳಿಗೆ ಹಲವಾರು ಮಿನಿ ಬಸ್ಸುಗಳಿವೆ. ಉಡುಪಿ ರೈಲ್ವೆ ನಿಲ್ದಾಣದಿಂದ ತೀರ್ಥಹಳ್ಳಿಯು ೮೬ ಕಿ.ಮೀ ದೂರದಲ್ಲಿದೆ. ಕುಂದಾದ್ರಿಗೆ ಹತ್ತಿರದ ರೈಲು ನಿಲ್ದಾಣ ಶಿವಮೊಗ್ಗದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. == ಛಾಯಾಂಕಣ == == ಉಲ್ಲೇಖಗಳು ==